ಮಂಗಳವಾರ, ಆಗಸ್ಟ್ 6, 2013

ಲೂಸಿಯಾ

ಸುಮಾರು ಒಂದೂವರೆ ವರ್ಷಗಳ ಹಿಂದಿನ ಕಥೆಯಿದು. ಇನ್ನೇನು ಬಿಡುಗಡೆಗೆ ಕಾದಿರುವ “ಲೈಫು ಇಷ್ಟೇನೆ” ಖ್ಯಾತಿಯ ಪವನ್ ಕುಮಾರ್ ನಿರ್ದೇಶನದ ಕ್ರೌಡ್ ಫಂಡೆಡ್ “ಲೂಸಿಯಾ” ಚಿತ್ರದ್ದು. ಚಿತ್ರ ಹೇಗಿದೆ ಅಂತ ನಾವು ಇನ್ನೂ ನೋಡಬೇಕಷ್ಟೇ, ಆದರೆ ಈ ಚಿತ್ರದ ಮೇಕಿಂಗ್ ಇದೆಯಲ್ಲಾ ಅದೇ ಒಂದು ಅದ್ಭುತ ಸ್ಕ್ರಿಪ್ಟ್ ಆಗಬಹುದು!

“ಲೈಫು ಇಷ್ಟೇನೆ” ಗೆಲುವಿನ ನಂತರ ಪವನ್ ಗೆ ಹೊಳೆದ ಐಡಿಯಾ “ಲೂಸಿಯಾ”. ಸ್ಕ್ರಿಪ್ಟ್ ಪೂರ್ತಿ ಮುಗಿಸಿ, ಉದ್ಯಮದಲ್ಲಿನ ತಮ್ಮ ಹಿತೈಷಿಗಳಿಗೆ ತೋರಿಸಿದರು, ಎಲ್ಲರಿಂದ ಮೆಚ್ಚುಗೆಯೂ ವ್ಯಕ್ತವಾಯಿತು. ಮೊದಲ ಸಿನಿಮಾ ಸಕ್ಸಸ್ ಆಗಿರೋವಾಗ ಎರಡನೆಯ ಸಿನಿಮಾ ಸುಲಭವಾಗಿ ಮಾಡಬಹುದು ಅಂದುಕೊಂಡಿದ್ದರು ಪವನ್. ಅವರ ನಿರೀಕ್ಷೆ ಸುಳ್ಳಾಗಿತ್ತು! ಅವರ ಸ್ಕ್ರಿಪ್ಟ್ ಅನ್ನು ಉದ್ಯಮದ ದೊಡ್ಡ ದೊಡ್ಡ ‘ವಿಶೇಷಣ’ ಸ್ಟಾರ್ ಗಳ್ಯಾರೂ ಓದಲೂ ಇಲ್ಲ. ಇದರಿಂದ ನೊಂದ ಪವನ್ ತಮ್ಮ ಹತಾಶೆಯನ್ನು ತಮ್ಮ ಬ್ಲಾಗ್ ಪೋಸ್ಟ್ ಮೂಲಕ ಹಂಚಿಕೊಂಡಿದ್ದರು.

ಈ ಬ್ಲಾಗ್ ಪೋಸ್ಟ್ ವೈರಲ್ ಆಗಿ ಸಾವಿರಾರು ಜನರನ್ನು ತಲುಪಿತ್ತು. ಯಾರೋ ಒಬ್ಬರು, ಆಸಕ್ತ ಜನರ ಹತ್ತಿರಾನೇ ದುಡ್ಡು ಪಡೆದು ಫಿಲಂ ಮಾಡಿ ಅಂತ ಸಲಹೆ ಕೊಟ್ರಂತೆ. ಇದು ಅಸಾಧ್ಯ ಅನಿಸಿದರೂ ಒಂದು ಪ್ರಯತ್ನ ಮಾಡಿಯೇ ಬಿಡೋಣ ಅಂತ ಯಾವುದೇ ಭರವಸೆ ಇಟ್ಟುಕೊಳ್ಳದೆ ಪವನ್ ಇನ್ನೊಂದು ಬ್ಲಾಗ್ ಪೋಸ್ಟ್ ಮಾಡಿದ್ರಂತೆ. ನೂರು ದಿನಗಳೊಳಗಾಗಿ ಐವತ್ತು ಲಕ್ಷ ಸೇರಿದರೆ ಚಿತ್ರ ಮಾಡುವುದು, ಇಲ್ಲಾ ಬಂದ ಹಣವನ್ನು ಹಿಂದಿರುಗಿಸಿಬಿಡೋದು ಅಂತ ಅಂದುಕೊಂಡಿದ್ದರು. ಆದರೆ ನಂಬಲಸಾಧ್ಯ ಅನ್ನುವಂತೆ ಗುರುತು ಪರಿಚಯ ಇರದ ಸುಮಾರು ಅರವತ್ತೇಳು ಜನರು ಐವತ್ತು ಲಕ್ಷ ಸೇರಿಸಿಬಿಟ್ಟರು, ಕೇವಲ ಇಪ್ಪತ್ತೇಳು ದಿನಗಳಲ್ಲಿ!

ಚಿತ್ರದ ನಿರ್ಮಾಣ ಶುರುವಾಗೇ ಬಿಟ್ಟಿತು. ಇದಾದ ನಂತರ ಈ ಚಿತ್ರದಲ್ಲಿ ಹಲವಾರು ವಿನೂತನ ಪ್ರಯೋಗಗಳು ನಡೆದವು :
ಅದಾಗ ತಾನೇ ಹೆಚ್ಚುಹೆಚ್ಚು ಪಾಪ್ಯುಲರ್ ಆಗುತ್ತಿದ್ದ ಫೇಸ್ಬುಕ್ ಅಂತಹ ಸೋಶಿಯಲ್ ಮೀಡಿಯಾ ಅನ್ನು ಪವನ್ ಸಮರ್ಪಕವಾಗಿ ಬಳಸಿಕೊಂಡರು. ತಮ್ಮ ಚಿತ್ರದ ಪ್ರಗತಿಯನ್ನು, ಅನುಭವಿಸುತ್ತಿರುವ ಬವಣೆಗಳನ್ನು ಎಲ್ಲವನ್ನೂ ಹಂಚಿಕೊಂಡು ಜನರಲ್ಲಿ ಚಿತ್ರದ ಬಗ್ಗೆ ಒಲವು ಮೂಡಲು ಸಹಾಯವಾಯಿತು. ಅದೇ ಸಮಯದಲ್ಲಿ ಪವನ್ ಗೆ ಬ್ರಿಟಿಷ್ ಕೌನ್ಸಿಲ್ ಅವರಿಂದ “ಯಂಗ್ ಆಂತ್ರಪ್ರಿನ್ಯುಯರ್ ಅವರ್ಡ್” ಕೂಡ ಲಭಿಸಿತು.
ಈ ಚಿತ್ರದಿಂದ ಬಹಳಷ್ಟು ಹೊಸಬರಿಗೆ ಅವಕಾಶವಾಯಿತು, ಉದಾಹರಣೆಗೆ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ. ತಮ್ಮ ಸಾಫ್ಟ್ ವೇರ್ ವೃತ್ತಿಯನ್ನು ಬಿಟ್ಟು ಬಂದ ತೇಜಸ್ವಿಯ ಬಳಿ ಈಗ ಇನ್ನೂ ಮೂರು ಚಿತ್ರಗಳಿವೆ. ನಮ್ಮ ರಾಜ್ಯದ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಅವಕಾಶ ಕೊಡಬೇಕೆನ್ನುವ ಇರಾದೆ ಆಗಲೇ ನೆರವೇರಿದೆ.
ಪ್ರತಿಭೆಗಳನ್ನು ಹುಡುಕುವಲ್ಲಿ ಹಲವಾರು ಪ್ರಯತ್ನ ನಡೆದಿದೆ. “ತಿನ್ಬೇಡ ಕಮ್ಮಿ” ಅನ್ನುವ ಹಾಡನ್ನು ಯೂಟ್ಯೂಬ್ ಅಲ್ಲಿ ಅನಾವರಣಗೊಳಿಸಿ, ಹಾಡಲು ಆಸಕ್ತಿ ಇರುವವರು ರೆಕಾರ್ಡ್ ಮಾಡಿ ಕಳಿಸಲು ಕೋರಲಾಯಿತು. ಆ ವೀಡಿಯೊ ವೈರಲ್ ಆಗಿ ಚಿತ್ರದ ಬಗ್ಗೆ ಕುತೂಹಲ ಕೂಡ ಹೆಚ್ಚಾಯ್ತು, ಉತ್ತಮ ಗಾಯಕರನ್ನು ಹುಡುಕುವ ವೇದಿಕೆಯೂ ಆಯಿತು.
ಗಾಯಕರು ಅಂದಾಕ್ಷಣ ಹೊರರಾಜ್ಯದವರು ಶ್ರೇಷ್ಠ ಅನ್ನುವ ಭಾವನೆ ನಮ್ಮ ಚಿತ್ರರಂಗದಲ್ಲಿದೆ. ಆದರೆ ಈ ಚಿತ್ರಕ್ಕಾಗಿ ನವೀನ್ ಸಜ್ಜು ಅನ್ನುವ ಒಬ್ಬ ಆರ್ಕೆಸ್ಟ್ರ ಸಿಂಗರ್ ನ ಪ್ರತಿಭೆಯನ್ನು ಗುರುತಿಸಿ, ಅವನಿಗೆ ಆರು ತಿಂಗಳುಗಳ ಕಾಲ ತರಬೇತಿ ಕೊಟ್ಟು, ಅವನಿಂದ ಹಾಡಿಸಿರುವ ಹಾಡುಗಳು ಈಗಾಗಲೇ ರಾಜ್ಯದಲ್ಲೆಲ್ಲಾ ಪ್ರಸಿದ್ಧಿಯಾಗಿದೆ.
ಹಾಗೆಯೇ ಪೋಸ್ಟರ್ ಡಿಸೈನ್ ಮಾಡಲು ಜನರೇ ಮುಂದೆ ಬಂದರು. ಯಾವ ಪೋಸ್ಟರ್ ಚನ್ನಾಗಿದೆ ಅನ್ನುವ ವಿಚಾರವಿನಿಮಯ ಕೂಡ ನಡೆಯಿತು.
ಇತ್ತೀಚಿಗೆ ಲಂಡನ್ ಇಂಡಿಯನ್ ಫಿಲಂ ಫೆಸ್ಟಿವಲ್ ಅಲ್ಲಿ ಪ್ರೀಮಿಯರ್ ಆದ ಮೊದಲ ಕನ್ನಡ ಚಿತ್ರ ಅನ್ನುವ ಹೆಗ್ಗಳಿಕೆ ಈ ಚಿತ್ರದ್ದು. ಅಷ್ಟೇ ಅಲ್ಲ, ಕರಣ್ ಜೋಹರ್, ಅನುರಾಗ್ ಕಶ್ಯಪ್ ಮುಂತಾದವರ ಚಿತ್ರಗಳ ಜೊತೆ ಪೈಪೋಟಿ ನಡೆಸಿ “ಲೂಸಿಯಾ” “ಆಡಿಯನ್ಸ್ ಚಾಯ್ಸ್ ಬೆಸ್ಟ್ ಫಿಲಂ ಅವಾರ್ಡ್” ಕೂಡ ಗೆದ್ದುಕೊಂಡಿತು! ಬಾಲಿವುಡ್ ನಟ “ಇರ್ಫಾನ್ ಖಾನ್” ಕೂಡ ಮೆಚ್ಚಿದ್ದಾರೆ ಈ ಚಿತ್ರವನ್ನು ನೋಡಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ